Thursday, June 5, 2025

ಸ್ಥಳವಾಚಕಗಳ – ವರ ಮತ್ತು – ವಾರಗಳು




ಸ್ಥಳವಾಚಕಗಳ ಅಂತ್ಯದಲ್ಲಿ ಬರುವ – ವರ ಮತ್ತು – ವಾರಗಳು – ಪುರ – ಎಂಬುದರಿಂದ ಬಂದುವೆಂದು ಡಾ.ಎಂ.ಚಿದಾನಂದ ಮೂರ್ತಿಯವರು ತಮ್ಮ ಒಂದು ಲೇಖನ (ಸಾಧನೆ.೭-೧ ಮಂಥನ)ದಲ್ಲಿ ಸೂಚಿಸಿದ್ದಾರೆ. ಈ ಸೂಚನೆಗಳನ್ನು ವಿರೋಧಿಸುವ ಡಾ.ಎಂ.ಎಂ.ಕಲಬುರ್ಗಿಯವರು, -ವರ-ವಾರಗಳು ಸಂಸ್ಕೃತದ ‘ಆಹಾರ’ ಎಂಬುದರಿಂದ ಬಂದವುಗಳೆಂದು (ಸಾಧನೆ. ೯-೧ ಮಂಥನ) ಹೇಳಿದ್ದಾರೆ. ಕರ್ನಾಟಕದ ಗ್ರಾಮವಾಚಕಗಳ ಬಗೆಗೆ ವ್ಯಾಪಕವಾದ ಅಧ್ಯಯನ ಇನ್ನೂ ನಡೆಯದೇ ಇರುವುದರಿಂದ ಮತ್ತು ಖಚಿತವಾದ ನಿಯಮಗಳು ಈ ದಿಶೆಯಲ್ಲಿ ಇನ್ನೂ ರೂಪಿಸಲ್ಪಡದಿರುವುದರಿಂದ ಈ ಎರಡು ಅಭಿಪ್ರಾಯಗಳು ಇನ್ನೂ ಹೆಚ್ಚಿನ ‘ಮಂಥನಕ್ಕೆ’ ಒಳಪಡಬೇಕಾದುದು ಅವಶ್ಯಕ ಮತ್ತು ಅನಿವಾರ್ಯ.
-ವರ, -ವಾರಗಳು ಡಾ.ಚಿದಾನಂದ ಮೂರ್ತಿಯವರು ಅಭಿಪ್ರಾಯ ಪಡುವಂತೆ -ಪುರದಿಂದ ಬಂದವೆಂದು ಹೇಳಲು ಅವರಿತ್ತ ಶಾಸನಾಧಾರ ಗಂಗಪುರ ಎಂಬುದು. (E.C. ix ದೇವನಹಳ್ಳಿ – ೭೮೦ A.D.) ಇದು ಶಾಸನಕಾರನ ಕಲ್ಪಿತ-ರೂಪವೆಂದು ಡಾ.ಕಲಬುರ್ಗಿಯವರು ಹೇಳಿದ್ದಾರೆ. ಸಂಸ್ಕೃತ ಮೂಲವಲ್ಲದ ಪದಗಳನ್ನು ಈ ರೀತಿ ಸಂಸ್ಕೃತೀಕರಣಗೊಳಿಸುವುದು ನಮ್ಮನಾಡಿನಲ್ಲಿ ವಿಪರೀತವಾಗಿದೆ. ಆದುದರಿಂದ ಗಂಗಪುರದಂಥ ಅನೇಕ ರೂಪಗಳು ಕಲ್ಪಿತವಾದವುಗಳೆಂದು ಹೇಳುವುದನ್ನು ಒಪ್ಪಬಹುದು. ಆದರೆ ಎಲ್ಲವೂ ಹೀಗೆ ಕಲ್ಪಿತವಾದವುಗಳೇ ಎಂದು ಹೇಳಲಾಗುವುದಿಲ್ಲ. ಉದಾಹರಣೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ‘ಉದಯಾವರ’ ಎಂಬ ಸ್ಥಳವಾಚಕವನ್ನು ನೋಡಬಹುದು. ಕ್ರಿ.ಶ. ೭ನೆಯ ಶತಮಾನದಿಂದ ಕ್ರಿ.ಶ. 9ನೆಯ ಶತಮಾನದ ವರೆಗಿನ ಶಾಸನಗಳಲ್ಲೆಲ್ಲ ಇದು ‘ಉದಯಪುರ’ (S.I.I. No. ೨೮೪ ಸು. ೭-೮ ನೆಯ ಶ.) ‘ಉದಯಾಪುರ’ (E.I.ix ಪು. 17-18 A.D. 675-720) ‘ಉದಯಾಪುರ’ (E.I.ix. ಪು ೧೯ ಸು. ೯ನೆಯ ಶ.) ಎಂಬ ರೂಪಾಂತರಗಳಲ್ಲಿ ತೋರಿಬರುತ್ತದೆ. ಇಲ್ಲಿಯ ಪೂರ್ವ ಪದವಾದ ‘ಉದಯ’ ಎಂಬುದು ನಿರ್ವಿವಾದವಾಗಿ ಸಂಸ್ಕೃತದ್ದು. ಅದೇ ರೀತಿ ಇಡೀ ಸಮಸ್ತಪದವೂ ಸಂಸ್ಕೃತದ್ದೆ. ಕಾರಣ ಇಲ್ಲಿ ಇಂದಿನ ರೂಪದ ‘ಉದಯಾವರ’ ಎಂಬುದರಲ್ಲಿಯ ಅಂತ್ಯ – ವರ ಎಂಬುದು ಪುರದಿಂದಲೇ ಬಂದುದೆಂಬುದು ನಿಶ್ಚಿತ. ಇದೇ ರೀತಿ ವಾರ ಎಂಬುದೂ ಪುರದಿಂದಲೇ ಬಂದುದೆಂದು ಹೇಳಲು ಹೆಚ್ಚಿನ ಶಾಸನಾಧಾರಗಳು ಬೇಕು.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಇಂಥ ಬದಲಾವಣೆ ಕೇವಲ ಕರ್ನಾಟಕಕ್ಕಷ್ಟೇ ಸೀಮತವಾಗಿಲ್ಲವೆಂಬುದು. ತಮಿಳುನಾಡಿನ ಪ್ರಾಚೀನ ಪಟ್ಟಣವೆನ್ನಿಸಿದ್ದ ‘ಕಾಂಚೀಪುರಂ’ ಇಂದು ‘ಕಾಂಜೀವರಂ’ ಎಂದಾಗಿರುವುದು ಸುಪ್ರಸಿದ್ಧ ವಿಷಯ. ಅದೇ ರೀತಿ ಧರ್ಮಾವರಂ ಕೂಡ ಅಂಥ ಬದಲಾವಣೆ ಗೊಳಪಟ್ಟ ಮತ್ತೊಂದು ಹೆಸರು. ಇವೆರಡೂ ಪುರದಿಂದಲೇ ಬಂದಿರುವುದು ನಿಸ್ಸಂಶಯ.
ಇನ್ನು – ವಾರ ಎಂಬುದು ‘ಆಹಾರ’ ಎಂಬುದರಿಂದ ಬಂದುದೆಂದು ಡಾ. ಕಲಬುರ್ಗಿಯವರು ಅಭಿಪ್ರಾಯ ಪಟ್ಟಿರುವುದರಲ್ಲಿಯೂ ಸತ್ಯಾಂಶವಿರುವಂತೆ ಕಾಣುತ್ತದೆ. ಅವರು ಎತ್ತಿ ತೋರಿಸಿರುವಂತೆ ಕ್ರಿ.ಶ. ೫ ರಿಂದ ೮ನೆಯ ಶತಮಾನದ ಕಾಲಾವಧಿಯಲ್ಲಿ ಆಹಾರದಿಂದ ಅಂತ್ಯವಾಗುವ ಹಲವಾರು ಸ್ಥಳವಾಚಕಗಳು ಸಂಸ್ಕೃತ ಶಾಸನಗಳಲ್ಲಿ ತೋರಿಬಂದಿವೆ. ಆಹಾರವು ಸವೆದು ಆದ -ವಾರ ಎಂಬುದರಿಂದ ಮುಗಿಯುವ ಕೆಲವಾದರೂ ಊರಹೆಸರುಗಳು ಅಂಥ ಮಾದರಿಯಾಗಿರುವುದೇ ಸಾಧ್ಯ. ಉದಾಹರಣೆಗಾಗಿ ಡಾ.ಕಲಬುರ್ಗಿಯವರ ಗಣೆಹಾರ, ಕೊಲ್ಹಾರ, ಭೂಯಾರ, ಮೈಲಾರ ಎಂಬವನ್ನು ಎತ್ತಿ ತೋರಿಸಿದ್ದಾರೆ. ಈ ಪಟ್ಟಿಯನ್ನು ಉಗಾರ, ಶೇಲಾರ, ಕೊಲ್ಲಾರ ಇತ್ಯಾದಿಯಾಗಿ ಬೆಳಸಬಹುದೆಂದು ಕಾಣುತ್ತದೆ.

-ಆಹಾರ ಎಂಬುದು ಗ್ರಾಮ – ಪಟ್ಟಣಗಳಿಗಿಂತ ಹೆಚ್ಚಾಗಿ ಪ್ರದೇಶ, ಪ್ರಾಂತ ಮುಂತಾದ ಜನಪದಗಳ ಅಂತ್ಯದಲ್ಲಿ ಸೇರುತ್ತಿತ್ತಂಬುದಕ್ಕೆ ಹೆಚ್ಚಿನ ಪ್ರಮಾಣಗಳಿವೆ. ಡಾ. ಕಲಬುರ್ಗಿಯವರು ಹೆಸರಿಸುವ ತ್ರೇಯಣಾಹಾರ. (ಕರ್ನಾಟಕದ ಅರಸು ಮನೆತನಗಳು ಪು.೫೦) ಕಾರ್ಮಣೇಯಾಹಾರ. (ಪು.೮೫) ಚರಣಗಾಹಾರ (ಪು.೭೭) ತಾಲಿತಟಾಹಾರ (ಪು.೮೭) ಮೃಗಥಣಿಕಾಹಾರ (ಪು.೯೪) ಕೋಟಾಹಾರ (ಪು. ೯೯) ಮುಂತಾದವು ವಿಷಯಗಳು ಅಥವಾ ನಾಡುಗಳ ಹೆಸರುಗಳಾಗಿದ್ದು ಪ್ರದೇಶ ವಾಚಕವಾಗಿವೆ. ತರಕಾಗಾಹಾರ ಮಾತ್ರ ಗ್ರಾಮವಾಚಕವಾಗಿವೆ. ಇವೆಲ್ಲವೂ ಇಂದಿನ ಕರ್ನಾಟಕದ ವ್ಯಾಪ್ತಿಯಿಂದ ಹೊರಗಿದ್ದವುಗಳೆಂಬುದು ಆಯಾ ಶಾಸನಗಳಿಂದ ವ್ಯಕ್ತವಾಗಿದೆ.

ಆಹಾರವೆಂಬುದರ ಬದಲು ಕರ್ನಾಟಕದ ಒಂದು ಪ್ರಾಕೃತ ಶಾಸನದಲ್ಲಿ
[1] ಬರೀಹಾರ ಎಂಬ ರೂಪದ ಪ್ರದೇಶವಾಚಕ ಕಂಡುಬರುತ್ತದೆ. ಉದಾ ಸಾತವ -ನಿ-ಹಾರ ಅದೇ ರೀತಿ ಮಳವಳ್ಳಿಯ ಪ್ರಾಕೃತ ಶಾಸನದಲ್ಲಿ ಎಕ್ಕದ್ಧಾಹಾರ (E.C.VII. ಶಿಕಾರಿಪುರ. ೨೬೪ ಸು. ೪ನೆಯ ಶ.) ಎಂಬ ಗ್ರಾಮವಾಚಕವೂ ಇದೆ. ಹಕಾರವು ಕನ್ನಡ ಭಾಷೆಗೆ ಪರಕೀಯವಾದ ಧ್ವನಿ. ಕ್ರಿ.ಶ. ೯ನೆಯ ಶತಮಾನ ದವರೆಗಿನ ಉಲ್ಲೇಖಗಳಲ್ಲಿ ಅದು ಎರಡು ಮೂರು ರೀತಿಯಲ್ಲಿ ಪರಿವರ್ತಿಸುತ್ತಿದ್ದುದು ಕಂಡುಬರುತ್ತದೆ. ಮೊದಲನೆಯದಾಗಿ ಅದು ಶೂನ್ಯಗೊಳ್ಳುತಿತ್ತು. ಉದಾ : ಹನುಮ (-ತ್) ಸಂ.> ಹುಣುಮ (-ಂತ್ ಪ್ರಾ > ಅಣುಮ[2] > ಅಣುವ. (ಕವಿರಾಜಮಾರ್ಗ -II-೩೮). ಇನ್ನು ಕೆಲವೆಡೆಯಲ್ಲಿ ಹಿಂದಿನ ಸ್ವರಕ್ಕೆ ತಕ್ಕಂತೆ ವ ಅಥವಯ ಎಂದು ಪರಿವರ್ತಿತವಾಗುತ್ತಿತ್ತು. ಅದುದರಿಂದ (ಆ) ಹಾರದಲ್ಲಿಯ ಹಕಾರವು ಬದಲಿಸಿ -ಆರ,-ವಾರ,-ಯಾರ ಎಂದು ತೋರಿಬರ ದಾಗಿದೆ. ಮತ್ತು ಆಕಾರ‍ವು ಹ್ರಸ್ವಗೊಳ್ಳಬಹುದು.

ಕರ್ನಾಟಕ ಮತ್ತು ಇತರ ಪ್ರದೇಶಗಳಲ್ಲಿ ವಾಡ-ವಾಡಿಯಿಂದ ಅಂತ್ಯವಾಗುವ ಅನೇಕ ಗ್ರಾಮವಾಚಕ, ಪ್ರದೇಶ ವಾಚಕಗಳು ತೋರಿಬರುತ್ತವೆ. ಇವುಗಳಿಂದ ಕೆಲವಾದರೂ-ವಾರ,-ವರ,-ವಾರಿಗಳೆಂದು ಅಂತ್ಯವಾಗುವ ಹೆಸರುಗಳು ಬಂದಿರುವ ಸಾಧ್ಯತೆಯಿದೆ. ಉದಾಹರಣೆಗೆ ಇಂದಿನ ‘ಕಾರವಾರ’ (ಉ.ಕ.ಜಿಲ್ಲೆಯ ಕೇಂದ್ರರ ಪಟ್ಟಣ) ವು ‘ಕಡವಾಡ’ ಎಂಬುದರ ರೂಪಾಂತರ ಎಂದು ಹೇಳುತ್ತಾರೆ. ಡ-ರ ವ್ಯತ್ಯಾಸವು ನಮ್ಮಲ್ಲಿ ಸಾಧ್ಯವೆಂದು ಬೇರೆ ಹೇಳಬೇಕಾಗಿಲ್ಲ. ಆದುದರಿಂದ -ವರ,-ವಾರಗಳು, -ವುರ, ಅಥವಾ (ಆ)ಹಾರಗಳಲ್ಲಿ ಒಂದರಿಂದ ಮಾತ್ರವೇ ಬಂದಿವೆಯೆಂದು ಹೇಳುವ ಬದಲು ಈ ಮೂರು ರೂಪಗಳಿಂದ ಬಂದಿವೆಯೆಂದು ಹೇಳಬಹುದು.

ಇನ್ನು (ವ್-ಆರ ಎಂಬ ರೂಪದಿಂದ ಇನ್ನೂ ಒಂದೆರಡು ಉಪಾಕೃತಿಗಳು ಹುಟ್ಟಿದಂತೆ ತೋರುತ್ತದೆ. ಕೆಲವೆಡೆಗಳಲ್ಲಿ ಅಂತ್ಯ ರಕಾರವು ಲಕಾರವಾಗಿದೆ. ಉದಾ: ನಂದಿಯಾಲ,[3] (ನಂದ್ಯಾಲ,) ಸೀಪಾಲ,[4] ಮೇತ್ಯಾಲ, ಎಡಾಲ, ಮದವಾಲ, ಕೊವಳಾಲ ಮುಂತಾದ ಉದಾಹರಣೆಗಳನ್ನು ನೋಡಬಹುದು.
ಸದ್ಯಕ್ಕೆ ಈ – ಆಲ ದಿಂದ ಅಂತ್ಯವಾಗುವ ಊರುಗಳಲ ಹೆಸರುಗಳಲ್ಲಿ ಕಾಲ, ಗಾಲ, ಕಲ್/ಗಲ್, ಕಲ್ಲು/ಗಲ್ಲು/, -ಆಲಿ, -ಅಲಿ, – ಬಾಳ, – ಪಾಳ,- ಹಾಳ ಇತ್ಯಾದಿಗಳನ್ನು ಸಮಾವೇಶಗೊಳಿಸಬಾರದೆಂದು ಹೇಳಬಹುದು. ಕೊಳ್ಳೇಗಾಲ, ಸತ್ಯಗಾಲ, ಮುಂತಾದವುಗಳಲ್ಲಿಯ ಸ್ವರಮಧ್ಯ – ಗ-ಕಾರವು ಕೆಲವೊಮ್ಮೆ ಶೂನ್ಯವಾಗಬಹುದಾದರೂ ಶಾಸನ ಮುಂತಾದವುಗಳಲ್ಲಿ ಆಧಾರಗಳು ದೊರೆತಾಗ ಅಂಥವುಗಳಿಗೆ ಮಹತ್ವ ಕೊಡಬಹುದು. ಅದೇ ರೀತಿ, (ಆ)ಹಾರ ದಿಂದ – ಆರ, ವಾರ,-ವರ ಮತ್ತು – ಆಲ,-ವಾಲ, ಪಾಲ, ಮುಂತಾದ ರೂಪಗಳು ಬಂದುದಕ್ಕೆ ಖಚಿತವಾದ ಆಧಾರಗಳು ಇನ್ನೂ ದೊರೆಯಬೇಕಾಗಿದೆ.
-ಪುರ, ದಲ್ಲಿಯ ಉ ಸ್ವರವು ಸ್ವರಸಮರೂಪಧಾರಣೆಯಿಂದ ಅ ಎಂದಾಗ ಬಹುದು. ಅದೇ ರೀತಿ ಪರಿಹಾರ ದೀರ್ಘಿಕರಣ ಮುಂತಾದ ಭಾಷಿಕ ಪ್ರಕ್ರಿಯೆ ಗಳಿಂದಲೂ ಆ > ಅ, ಆ>ಇ, ಮುಂತಾದ ಪರಿವರ್ತನೆಗಳಿಂದಲೂ ಧ್ವನಿ ವ್ಯತ್ಯಾಸಗಳನ್ನು ವಿವರಿಸಬಹುದು. ಒಟ್ಟಿನಲ್ಲಿ ಕೆಳಗಿನಂತೆ ಈ ರೂಪಾವಳಿಗಳನ್ನು ಸೂಚಿಸಬಹುದು.

 ಹಣವನ್ನು ತಿನ್ನಲಾಗುವುದಿಲ್ಲ

ಅಮೆರಿಕಾದ ಮೂಲ ನಿವಾಸಿಗಳಾದ ಕ್ರೀ ಎಂಬ ಜನಾಂಗದ ಒಂದು ನುಡಿ ಹೀಗಿದೆ :
ಕಟ್ಟಕಡೆಯ ಮರವನ್ನೂ
ಕತ್ತರಿಸಿ ಹಾಕಿದ ನಂತರ,
ಕಟ್ಟಕಡೆಯ ನದಿಗೆ ವಿಷವಿಕ್ಕಿದ ನಂತರ,
ಕಟ್ಟಕಡೆ ಮೀನನ್ನೂ ಹಿಡಿದ ನಂತರ,
ಆಗಷ್ಟೇ ನಿನಗೆ ಗೊತ್ತಾಗುತ್ತದೆ, ಹಣವನ್ನು ತಿನ್ನಲಾಗುವುದಿಲ್ಲ ಎಂದು.
ಅಮೆರಿಕಾದ ಟ್ರೂಮನ್ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ತೃತೀಯ ಜಗತ್ತನ್ನು ಅಭಿವೃದ್ಧಿ ಪಡಿಸುವುದೇ ನಮ್ಮ ಗುರಿಯಾಗಿರಬೇಕು ಎಂದು ಎಲ್ಲರೂ ಉದಾತ್ತವೆಂದು ತಿಳಿಯುವ ಮತನ್ನು ಆಡಿದ್ದಾನೆ. ಹಾಗೆ, ವಿಕ್ಟೋರಿಯಾ ರಾಣಿಯ ಕಾಲದಲ್ಲಿ ಭಾರತವನ್ನು ನಾಗರಿಕ ದೇಶವಾಗಿ ಮಾಡುವುದೇ ತನ್ನ ಗುರಿಯೆಂದು ಮೆಕಾಲೆ ತಿಳಿದಿದ್ದನು. ಬಲಿಷ್ಠ ಪಾಶ್ಚಿಮಾತ್ಯ ದೇಶಗಳು ನಮ್ಮ ತೃತೀಯ ಜಗತ್ತನ್ನು ದೋಚಲು, ದೋಚಿ ತಾವು ಬೆಳೆಯಲು ಬಳಸುವ ಎರಡು ಮಾರ್ಗಗಳೆಂದರೆ; ಆಗ ಸಮಾಜೋದ್ಧಾರ. ಈಗ ಆರ್ಥಿಕ ಪ್ರಗತಿ.

ಕೆಲವು ದಿನಗಳ ಹಿಂದೆ, ಕುದುರೆಮುಖ ಗಣಿಯ ಮುಖ್ಯಸ್ಥರು ನನ್ನನ್ನು ನೋಡಲೆಂದು ಬಂದರು. ಅವರ ಮಾತಿನ ವೈಖರಿಯಲ್ಲಿ ಅವರು ಸಜ್ಜನರೂ ಸತ್ಯಪಕ್ಷಪಾತಿಗಳೂ ಎಂದು ತೋರುತ್ತಿತ್ತು. ನಾವಿಬ್ಬರೂ ಬಹಳ ವಿಶ್ವಾಸದಿಂದಲೇ ಮಾತನಾಡಿದೆವು. ಕುದುರೆಮುಖದಲ್ಲಿ ಇನ್ನಷ್ಟು ವರ್ಷಗಳ ಕಾಲ ಗಣಿಗಾರಿಕೆಯನ್ನು ಮುಂದುವರಿಸುವುದು, ಆ ಪ್ರದೇಶದ ಉಳಿವಿಗೆ ಎಷ್ಟು ಅನಿವಾರ್ಯ ಎಂಬುದು ಅವರ ವಾದವಾಗಿತ್ತು. ತನ್ನನ್ನು ನನಗೆ ಪರಿಚಯಿಸಿಕೊಂಡಾಗ ತಾವು ಸೈಲೆಂಟ್ ವ್ಯಾಲಿ ಪ್ರದೇಶದವರೆಂದೂ, ಕೇರಳದ ಮೊದಲನೆಯ ಜ್ಞಾನಪೀಠ ಲೇಖಕರ ಅಭಿಮಾನಿಯೆಂದೂ ಹೇಳಿಕೊಂಡಿದ್ದರು.

ಇವರ ಜೊತೆ ಮಾತನಾಡುತ್ತಾ ನಾನು ‘ಕುದುರೆಮುಖದಿಂದ ಸರ್ಕಾರದ ಬೊಕ್ಕಸಕ್ಕೆ ಅದೆಷ್ಟೇ ಹಣ ಬಂದರೂ ನನಗದು ಮುಖ್ಯ ಎನಿಸುವುದಿಲ್ಲ’ ಎಂದು ಹೇಳಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಉಪಯೋಗಿಸುವ ಬಡತನ ಎನ್ನುವ ಶಬ್ದದಲ್ಲೇ ನಮ್ಮನ್ನು ನಾಶ ಮಾಡುವ ಹುನ್ನಾರವಿದೆ. ಎರಡು ಹೊತ್ತು ರಾಗಿ ಮುದ್ದೆ ತಿಂದು, ಹಗಲೆಲ್ಲಾ ದುಡಿದು, ರಾತ್ರಿ ಚೆನ್ನಾಗಿ ನಿದ್ದೆ ಮಾಡಿ, ಮಕ್ಕಳನ್ನೂ ಶಾಲೆಗೆ ಕಳುಹಿಸಿ, ಪ್ರತಿಯೊಂದು ಹಬ್ಬವನ್ನೂ ಆಚರಿಸುತ್ತಾ ಇಡೀ ಸಂಸಾರ ಯಾವುದೋ ನದಿಯ ದಂಡೆಯ ಮೇಲಿರುವ ದೇವಸ್ಥಾನಕ್ಕೆ ಹರಕೆ ಹೊತ್ತು ಬದುಕುವುದು ಅಮೆರಿಕದ ಕಣ್ಣಲ್ಲಿ ಬಡತನವೇ. ಯಾಕೆಂದರೆ ಅವರಿಗೆ ಒಂದು ಸೈಕಲ್ಲನ್ನು ಕೊಳ್ಳುವುದು ಕೂಡ ಸಾಧ್ಯವಿಲ್ಲ. ಆದರೆ ನಮ್ಮ ದೇಶವನ್ನು ನಾಶವಾಗದಂತೆ ಉಳಿಸಿಕೊಂಡು ಬಂದವರು, ಜೊತೆಗೆ ತಾವೂ ಉಳಿದುಬಂದವರು ಈ ಜನರೇ.
ಆಧುನಿಕ ಪ್ರಗತಿಯಿಂದ ಆಗಿರುವ ನಿಜವಾದ ಉಪಯೋಗ ಅಂದರೆ ಹೆಂಗಸರು ಮಕ್ಕಳನ್ನು ಹೆರುವಾಗ ಆ ದಿನಗಳಲ್ಲಿ ಸಾಯಬೇಕಾಗಿಲ್ಲ. ಟೈಫಾಯಿಡ್ ರೋಗದಿಂದ ಯಾರು ಸಾಯಬೇಕಿಲ್ಲ. ಇದನ್ನು ಬಿಟ್ಟರೆ ಒಂದು ಗುಡಿಸಲಲ್ಲಿ ವಾಸವಾಗಿದ್ದುಕೊಂಡು ಆರೋಗ್ಯವಾಗಿ ಸುಖ ಸಂತೋಷದಲ್ಲಿ ಗುಂಪಿನಲ್ಲಿ ಕೂತು ಹಾಡಿ ಕುಣಿಯಬಲ್ಲ ಜನ ಪಾಶ್ಚಾತ್ಯರ ಕಣ್ಣಲ್ಲಿ ಬಡವರಾಗಿದ್ದರೂ, ನಾವು ಅವರ ಬಗ್ಗೆ ಆತಂಕ ಪಡಬೇಕಾಗಿಲ್ಲ.

ನಿಜವಾದ ಸಮಸ್ಯೆ ಎಂದರೆ ಮಕ್ಕಳು ರಾತ್ರೆ ಊಟವಿಲ್ಲದೆ ಹಸಿದುಕೊಂಡು ಮಲಗುವುದು ಮತ್ತು ಅವರ ತಂದೆ ತಾಯಂದಿರು ತಾವೂ ಹಸಿದುಕೊಂಡಿರುವುದಲ್ಲದೆ, ಮಕ್ಕಳೂ ಹಸಿದಿದ್ದಾರೆಂದು ಸಂಕಟಪಡುವುದು. ಜರ್ಮನಿಯಲ್ಲಿ ನಡೆದ ಚರ್ಚೆಯೊಂದರಲ್ಲಿ ನಾನು, ಬಡತನದ ಬಗ್ಗೆ ಮಾತನಾಡುವುದು ನಿಮ್ಮ ಕಪಟ ರಾಜಕೀಯ, ಆದರೆ ಹಸಿವನ ಬಗ್ಗೆ ಹಸಿದಿರುವವರ ಬಗ್ಗೆ ನಾವು ಸಂಕಟಪಡುವುದು ನಿಜವಾದ ಮಾನವೀಯತೆ ಎಂದು ಕೊಂಚ ಉತ್ಪ್ರೇಕ್ಷೆಯಲ್ಲಿಯೇ ಮಾತಾಡಿದ್ದೆ.
ಕುದುರೆಮುಖದ ಗಣಿಗಾರಿಕೆಯಿಂದ ಚಿನ್ನ ಸಿಗುವುದಾದರೂ ನಮಗದು ಬೇಕಾಗಿಲ್ಲ ಎಂದು ನಾವು ತಿಳಿದುಕೊಂಡು ವರ್ತಿಸಬೇಕು. ನಿತ್ಯ ದುಡಿಯುವ ಒಬ್ಬ ಮನುಷ್ಯ ಮತ್ತೆ ನಾಳೆ ದುಡಿಯಲು ಬೇಕಾಗುವ ಆಹಾರವನ್ನು ಸಂಪಾದಿಸುತ್ತಾನೆ. ಹೀಗೆ ದುಡಿಮೆಯಿಂದ ಶಕ್ತಿಯನ್ನು ಪಡೆದು ಅದನ್ನು ದುಡಿಮೆಗೇ ವಿನಿಯೋಗಿಸುತ್ತಾ ಇರುವ ನಮ್ಮ ಅಸಂಖ್ಯ ದುಡಿಮೆಗಾರರು ಪರಾಗಸ್ಪರ್ಶಕ್ಕೆ ಕಾದಿರುವ ಹೂವಿನಂತಿರುತ್ತಾರೆ. ಯಾವುದೋ ದುಂಬಿ ಆಕಸ್ಮಿಕವಾಗಿ ತ್ನನ್ನು ಬಂದು ಮುಟ್ಟೀತೆನ್ನುವ ಭರವಸೆಯಲ್ಲಿ, ಗಾಳಿಯಲ್ಲಿ ಅಲ್ಲಾಡುತ್ತಾ ಇರುವ ಹೂವಿನ ಹಾಗೆ ಇದ್ದುಬಿಡುತ್ತಾರೆ. ಯಾವುದೇ ದೈವ ತಮ್ಮನ್ನು ಬಂದು ಮುಟ್ಟೀತೆನ್ನುವ ಭರವಸೆಯಲ್ಲಿ, ಹರಕೆಯಲ್ಲಿ ಬಾಳುತ್ತಾ ನದಿಗಳ ಸಂಗಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ಮೀಯುತ್ತಾ, ಕಾಲ್ನಡಿಗೆಯಲ್ಲಿ ಯಾತ್ರೆ ಮಾಡುತ್ತಾ ಇರುವ ಅಪಾರ ಜನ ಕೋಟಿ ನಮ್ಮ ದಿನನಿತ್ಯದ ಬದುಕನ್ನು ಅರ್ಥಪೂರ್ಣವನ್ನಾಗಿ ಮಾಡುತ್ತದೆ. ದೇವರು ಇದ್ದಾನೋ ಇಲ್ಲವೋ ತಿಳಿಯದು. ಪ್ರಾಯಶಃ ಅವನನ್ನು ಮುಟ್ಟುವ ಭರವಸೆಯಲ್ಲಿ ಎಲ್ಲರೂ ಕೊನೆಗೆ ಸಾಯುವುದೇನೋ? ಹೀಗೆ ನಿತ್ಯದ ದುಡಿಮೆಯ ಕಾಯಕ ಮತ್ತು ಅಗೋಚರವಾದದ್ದರ ಭರವಸೆಯ ಈ ಜೀವನದಲ್ಲಿ ಭಾರತದ ಅಪಾರ ಜನಸಂಖ್ಯೆಗೆ ನಿಜವಾಗಿ ಸುಖ ಸಿಗುವುದು ಮಕ್ಕಳ ಪಾಲನೆ, ಲಾಲನೆ, ಹಬ್ಬಹರಿದಿನಗಳ ಊಟ, ಕೊಂಚ ಬಿಡುವಿದ್ದಾಗ ನಡೆಯುವ ಕಾಡು ಹರಟೆ ಇವುಗಳಲ್ಲೇ.

ಇದನ್ನು ಈ ಸಂದರ್ಭದಲ್ಲಿ ಮಾತಾಡುವುದೇ ಓದುಗರಿಗೆ ವಿಚಿತ್ರ ಅನ್ನಿಸಬಹುದು. ಆದರೆ ಬದುಕಿನ ಈ ಸ್ಥಾಯೀ ಸ್ವರೂಪವನ್ನು ಮತ್ತು ಅದರ ಸಂಚಾರೀ ಕನಸುಗಳನ್ನು, ಭರವಸೆಗಳನ್ನು ಹೃದಯದಲ್ಲಿ ಅರಿತು ದುಡಿಯುವವರಿಗೆ ದೇಶದ ಉತ್ಪಾದನೆಯನ್ನು ಹೆಚ್ಚಿಸುವ ಈಚಿನ ಅನೇಕ ಯೋಜನೆಗಳು ಕ್ರಿಮಿನಲ್ ವಿಚಾರವಾಗಿ ಭಾಸವಾಗುತ್ತದೆ. ವೇಗವಾಗಿ ಹೋಗುವ ಕಾರುಗಳಿಗಾಗಿ ನಾವು ಮಾಡುವ ರಸ್ತೆಗಳನ್ನು ಕಂಡಾಗ ಒಬ್ಬ ಮುದುಕ, ಮುದುಕಿ ಅಥವಾ ಒಂದು ಮಗು ರಸ್ತೆಯ ಈ ಬದಿಯಿಂದ ಇನ್ನೊಂದು ಬದಿಗೆ ಹೋಗುವುದೇ ಅಸಾಧ್ಯವಲ್ಲವೇ ಅನ್ನುವ ಸಂಕಟ ಉಂಟಾದರೆ ನಾವು ಮನುಷ್ಯರು. ಬದಲಾಗಿ ಎಷ್ಟು ವೇಗವಾಗಿ ಒಂದು ಕಾರು ಸಂಚರಿಸಬಲ್ಲದು ಎಂದು ಯೋಚಿಸಿದರೆ ನಾವು ರಾಕ್ಷಸರು.
ನಮ್ಮದಲ್ಲದ ಅಮೆರಿಕನ್ ಉಚ್ಛಾರಣೆಯಲ್ಲಿ ಮಾತನಾಡುತ್ತಾ, ಯಾರದೋ ಹೆಸರನ್ನು ಇಟ್ಟುಕೊಂಡು, ಅಮೆರಿಕದ ಹಗಲು ಅವರಿಗೆ ಅರ್ಥಪೂರ್ಣವಾಗಬೇಕೆಂದು ನಮ್ಮ ರಾತ್ರೆಗಳನ್ನು ನಿದ್ದೆಯಿಲ್ಲದೆ ಕಳೆಯುವ ಐಟಿಗಳ ನಗರ ಬೆಂಗಳೂರು ಎಂಬುದು ನಮಗೆ ಸಂತೋಷದಾಯಕ ಆಗಿರುವುದು ಮನಸ್ಸಿನ ವಿಕಾರದ ಫಲ. ನಮ್ಮ ಜಾಣ ಯುವಕ ಯುವತಿಯರು ಇನ್ನು ಮುಂದೆ ಶಾಲಾ ಶಿಕ್ಷಕರಾಗಲು ಬಿ.ಎಡ್. ಮಾಡಬೇಕಾಗಿಲ್ಲ. ಅಥವಾ ಕೈಗಾರಿಕೆಗಳಲ್ಲಿ ಸೂಕ್ಷ್ಮವಾದ ಕೆಲಸವನ್ನು ಮಾಡಲು ಕಲಿಯಬೇಕಾಗಿಲ್ಲ. ಅಮೆರಿಕನ್ನರಿಗೆ ಸರಿ ಎಂದು ಕಾಣಿಸುವ ಉಚ್ಛಾರಣೆಯಲ್ಲಿ ಇಂಗ್ಲಿಷನ್ನು ಕಲಿತುಬಿಟ್ಟರೆ ಬೇರೆ ಯಾವ ಕೆಲಸಕ್ಕಿಂತಲೂ ಹೆಚ್ಚಿನ ಸಂಪಾದನೆ ಸಾಧ್ಯ.

ಹೀಗೆ ಬದುಕಿನ ಹಲವು ಸಾಧ್ಯತೆಗಳನ್ನು ನಾಶ ಮಾಡುವ ಅಭಿವೃದ್ಧಿಯ ಯೋಜನೆಗಳು ವಿನಾಶಕಾರಿಯಾದವು. ನಾವು ಭೂಮಿಯಿಂದ ಅಗೆದು ತೆಗೆಯುವ ಖನಿಜ ಹಾಗೂ ನಮ್ಮ ಆತ್ಮದಲ್ಲಿ ಇರುವ ರತ್ನ ಎರಡನ್ನೂ ಎಕ್ಸ್ಪೋರ್ಟ್ ಮಾಲುಗಳೆಂದು ತಿಳಿದು ಭಾರತ ಹಿಂದೆಂದೂ ಕಾಣದಂಥ ಗುಲಾಮ ರಾಷ್ಟ್ರವಾಗಿದೆ. ಅಮೆರಿಕದ ಒಬ್ಬ ಯಃಕಶ್ಚಿತ ವಿದೇಶಾಂಗ ಅಧಿಕಾರಿ ನಮ್ಮ ದೇಶದ ಪ್ರಧಾನಿಯನ್ನೂ ಎದೆಗುಂದಿಸುವಂತೆ ಮಾಡಬಲ್ಲ ಶಕ್ತಿಯನ್ನು ನಾವೇ ಅವರಿಗೆ ದಯಪಾಲಿಸಿದ್ದೇವೆ.
ಕೃಪೆ: ‘ಹಾಯ್ ಬೆಂಗಳೂರು’ ಅಕ್ಟೋಬರ್ ೨೦೦೫

 ಆಂಗ್ಲ ಕಲ್ಪಿತ ಭ್ರಮಾಲೋಕದಲ್ಲಿ ಬದುಕುತ್ತಿರುವ ನಾವು

ತಾವು ನಿತ್ಯ ಮನೆಯಲ್ಲಿ ಆಡುವ ಭಾಷೆಯಲ್ಲಿ ಅತ್ಯಾಧುನಿಕರಾಗಿಬಿಡುವ ಭ್ರಮೆಯಲ್ಲಿ ಬದಲಿಸಿಕೊಳ್ಳುವ ಆಸೆ ನಮ್ಮ ನಡುವಿನ ಅದೃಷ್ಟವಂತರಿಗೆಲ್ಲ ಹುಟ್ಟಿಕೊಂಡುಬಿಟ್ಟಿದೆ ಎಂದು ತೋರುತ್ತಿದೆ. ಈ ಕಾರಣಕ್ಕಾಗಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಎಷ್ಟೇ ಫೀಸಾದರೂ ಕಟ್ಟಿ ಸೇರಿಸುವವರೇ ಹೆಚ್ಚಗಿದ್ದಾರೆ. ಇವರಿಗೆ ನಮ್ಮ ಎಲ್ಲ ಸರಕಾರಿ ಶಾಲೆಗಳೂ ಕಳಪೆಯಾಗಿ ಕಾಣತೊಡಗಿವೆ. ಅದೃಷ್ಟವಂತರ ಮಕ್ಕಳು ಈ ಶಾಲೆಗಳಿಗೆ ಹೋಗದಿರುವುದರಿಂದ ತಮ್ಮ ಮಕ್ಕಳು ಬುದ್ಧಿವಂತರಾಗಬೇಕೆಂದು ಆಶಿಸುವ ತಾಯ್ತಂದೆಯರ ಬೆಂಬಲ ಈ ಶಾಲೆಗಳಿಗೆ ಸಿಗದೆ ಅನಿವಾಯ್ವಾಗಿ ಕಳಪೆಯಾಗುತ್ತಿವೆ. ವಿಪರ್ಯಾಸವೆಂದರೆ ನಮ್ಮ ನಡುವಿನ ಒಳ್ಳೆಯ ಉಪಾಧ್ಯಾಯರಲ್ಲಿ ಹೆಚ್ಚು ಕಲಿತಿರುವವರು ಇರುವುದು ಕಳಪೆಯಾಗಿ ಕಾಣುವ ಈ ಸರಕಾರಿ ಶಾಲೆಗಳಲ್ಲಿ. ಹೆಚ್ಚು ಸಂಬಳ ಪಡೆಯುತ್ತ ಇರುವವರೂ ಇವರೇ. ತುಂಬಾ ಫೀಸ್ ತೆಗೆದುಕೊಂಡು ನಡೆಸುತ್ತಿರುವ ಖಾಸಗಿ ಶಾಲೆಗಳಲ್ಲಿ ಇವರಷ್ಟು ಸಂಬಳ ಪಡೆದು ಕೆಲಸ ಮಾಡುತ್ತಿರುವವರಾಗಲೀ, ಇವರಷ್ಟು ಟ್ರೈನಿಂಗ್ ಪಡೆದು ಉಪಾಧ್ಯಾಯರಾಗಲೀ ಇಲ್ಲ. ಆದರೆ ಸರಕಾರದ ಬೆಂಬಲವಿದ್ದೂ, ಒಳ್ಳೆಯ ಉಪಾಧ್ಯಾಯರಿದ್ದೂ ಚೆನ್ನಾಗಿ ನಡೆಯಬೇಕಾದ ಸರಕಾರಿ ಶಾಲೆಗಳು ಕುಸಿಯುತ್ತಿವೆ. ಕೇರಳದಲ್ಲಂತೂ ಈ ಶಾಲೆಗಳು ಮುಚ್ಚುತ್ತಿವೆ. ನಮ್ಮಲ್ಲೂ ಮುಚ್ಚಲು ಶುರುವಾಗಿವೆ. ಆದರೆ ಗಿಣಿಪಾಠ ಮಾಡುವ ಕಳಪೆಯಾದ ಇಂಗ್ಲಿಷ್ ಮಾಧ್ಯಮ ಶಾಲೆಗಳು ಎಲ್ಲೆಲ್ಲೂ ಬೆಳೆಯುತ್ತಿವೆ. ಇದಕ್ಕೇನು ಪರಿಹಾರವೆಂದು ನಾವು ಯೋಚಿಸಬೇಕಾಗಿದೆ.

ಸರಕಾರಿ ಶಾಲೆಗಳು ಬಲಗೊಳ್ಳಬೇಕಾದರೆ ಎಲ್ಲ ವರ್ಗದ, ಎಲ್ಲ ಜಾತಿಯ ಮಕ್ಕಳು ಈ ಶಾಲೆಗಳಿಗೆ ಹೋಗುವಂತಾಗಬೇಕು. ಬಡವರು ಮಾತ್ರ ಸರಕಾರಿ ಶಾಲೆಗಳಿಗೆ, ಅದೃಷ್ಟವಂತರ ಮಕ್ಕಳು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಿಗೆ ಹೋಗುವುದು  ಶುರುವಾದರೆ ಯಾವ ಮಕ್ಕಳೂ ಒಂದೇ ದೇಶದವರಾಗಿ, ಆರೋಗ್ಯಕರವಾದ ಮನಸ್ಸುಳ್ಳವರಾಗಿ, ಸಮುದಾಯದ ಪ್ರಜ್ಞೆಯುಳ್ಳವರಾಗಿ ಬೆಳೆಯಲಾರರು. ಇದು ಬಡವರಿಗೆ ಹಿತವಲ್ಲ; ಅದೃಷ್ಟವಂತರಿಗೆ ಗಾಢವಾದ ಜೀವನಿಷ್ಠ ಜ್ಞಾನಾರ್ಜನೆಯ ದೃಷ್ಟಿಯಿಂದ ಒಳ್ಳೆಯದಲ್ಲ.

ಮುಖ್ಯವಾದ ಮಾತು ಇದು : ಮಾಧ್ಯಮದ ಪ್ರಶ್ನೆಯನ್ನು ಸ್ಕೂಲಿನ ಪ್ರಶ್ನೆಯೆಂದು ನೋಡಲೇಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ಇಲ್ಲದಿದ್ದರೆ ಕನ್ನಡ ಮಾಧ್ಯಮದ ಕಲಿಕೆ ನಿಜವಾಗಲಾರದು; ಬಲವಾಗಿ ಬೇರೂರದು. ಆದ್ದರಿಂದ ಈ ಸರಕಾರಿ ಶಾಲೆಗಳಿಗೆ ಎಲ್ಲರೂ ತಮ್ಮ ಮಕ್ಕಳನ್ನು ಕಳುಹಿಸಬೇಕು ಎಂದು ಅನ್ನಿಸುವುದಕ್ಕೆ ಬೇಕಾದ ಕ್ರಮಗಳನ್ನೆಲ್ಲ ನಾವು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದಲೆ ನಮ್ಮಲ್ಲಿ ಕೆಲವರಿಗೆ ಈ ಸಾಮಾನ್ಯ ಶಾಲೆಗಳಲ್ಲೂ ಮೊದಲನೆಯ ತರಗತಿಯಿಂದಲೇ ಇಂಗ್ಲಿಷ್ ಮಾತನಾಡಲು ಕಲಿಸುವುದು ಅಗತ್ಯವೇನೋ ಅನ್ನಿಸಿರುವುದು. ಇಂಗ್ಲಿಷನ್ನು ಐದನೆಯ ತರಗತಿಯಿಂದ ಕಲಿಸಿದರೂ ಸಾಕು. ಆದರೆ ತಾಯ್ತಂದೆಯರು ತಮ್ಮ ಮಕ್ಕಳನ್ನು ಈ ಕಾರಣಖ್ಕಾಗಿ ಸಾಮಾನ್ಯ ಸರಕಾರಿ ಶಾಲೆಗಳಿಗೆ ಕಳುಹಿಸದೆ ಖಾಸಗಿ ಶಾಲೆಗಳಿಗೆ ಕಳಿಸುವುದಾದರೆ ಆಗ ನಾವೇನು ಮಾಡಬೇಕು? ‘ನಿಮ್ಮ ಮಕ್ಕಳಿಗೆ ಇಂಗ್ಲಿಷ್ ಬೇಕೋ? ಬೇಕಾದರೆ ಮಾತನಾಡಲು ಮೊದಲನೆಯ ತರಗತಿಯಿಂದಲೇ ಇಂಗ್ಲಿಷನ್ನು ಹೇಳಿಕೊಡುತ್ತೇವೆ; ಆದರೆ ಎಲ್ಲ ವಿಷಯಗಳನ್ನೂ ಅವರಿಗೆ ಆಪ್ತವಾಗಿ ಗೊತ್ತಿರುವ ದೇಶದ ಭಾಷೆಯಾದ ಕನ್ನಡದಲ್ಲೆ ಹೇಳಿಕೊಡುತ್ತೇವೆ. ಆಗ ಅವರಲ್ಲಿ ವಿಷಯಜ್ಞಾನವೂ ಗಾಢವಾಗುತ್ತದೆ, ಮುಂದಕ್ಕೆ ಅಗತ್ಯವಾದ ಇಂಗ್ಲಿಷಿನ ಭಯವೂ ಹೋದಂತಾಗುತ್ತದೆ’ ಎನ್ನಬೇಕು.

ಹೀಗಾದರೂ ನಮ್ಮ ಸರಕಾರಿ ಶಾಲೆಗಳು ಬಲವಾಗುತ್ತವೆಯೇ ಎಂದು ನೋಡಬೇಕು. ವಿದ್ಯೆಗೆಂದು ನಾವು ತೆಗೆದುಕೊಳ್ಳುವ ತೆರಿಗೆಗಳನ್ನು ಖರ್ಚು ಮಾಡುವುದು ಸರಕಾರಿ ಶಾಲೆಗಳಿಗೆ. ಈ ಶಾಲೆಗೆ ಮಕ್ಕಳು ಬರುವಂತಾದರೆ ಮಾತ್ರ ಕನ್ನಡ ಮಾಧ್ಯಮ ಗಟ್ಟಿಯಾಗುತ್ತದೆ. ಇಲ್ಲವಾದರೆ ಜನರ ಮನಸ್ಸಿನಲ್ಲಿ ಅದೊಂದು ಕಳಪೆಯಾದ ಕಲಿಕೆ ಎಂಬ ಭಾವನೆ ಊರಿರುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ದುಡ್ಡು ತೆಗೆದುಕೊಂಡು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಡೆಸಬಹುದಾದ್ದರಿಂದ ಕೈಯಲ್ಲಿ ಅಷ್ಟಿಷ್ಟು ಕಾಸಿರುವ ಕೂಲಿಗಾರರೂ ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಳುಹಿಸಲು ಮುಂದಾಗುತ್ತಾರೆ. ನಾವೆಲ್ಲರೂ ಒಂದು ದೊಡ್ಡ ಆಂಗ್ಲ ಕಲ್ಪಿತ ಭ್ರಮಾಲೋಕದಲ್ಲಿ ಬದುಕುತ್ತಿದ್ದೇವೆ. ಈ ಇಂಗ್ಲಿಷ್ ಮಾಧ್ಯಮ ಶಾಲೆಗಳಿಂದಾಗಿ ನಮ್ಮ ಮಕ್ಕಳು ಭಾಷಾದರಿದ್ರರಾಗುತ್ತಾರೆ. ಅಲ್ಲದೆ ವಿಷಯಜ್ಞಾನ ದರಿದ್ರರೂ ಆಗುತ್ತಾರೆ.

ಖಾಸಗಿ ಶಾಲೆಗಳನ್ನು ನಾವು ಮುಚ್ಚಿಸುವಂತಿಲ್ಲ. ಆದರೆ ಈ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹೋಗುವ ನಮ್ಮ ಮಕ್ಕಳು ದೇಶದ ಭಾಷೆಯನ್ನು ಕಲಿಯದೆ ವಯಸ್ಕರಾದಾಗ ತಾವು ಅನ್ಯರೂ ಅತಂತ್ರೂ ಎಂಬ ಭಾವನೆಯಿಂದ ನರಳದಿರುವಂತೆ ಮಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಆದ್ದರಿಂದ ಕೆಲವು ಕ್ರಮಗಳನ್ನು ನಾವು ಮಕ್ಕಳ ಹಿತದೃಷ್ಟಿಯಿಂದ ಈ ಶಾಲೆಗಳಲ್ಲೂ ಜಾರಿಗೆ ತರಬೇಕು. ಇದು ತುಂಬ ಮುಖ್ಯವಾದದ್ದು ಎಂದು ನಾನು ತಿಳಿದಿದ್ದೇನೆ.

ಇಂಗ್ಲಿಷ್ ಮಾಧ್ಯಮದ ಈ ಮಕ್ಕಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯ ಮಾಡಿದರೆ ಸಾಕೆಂದು ನಮ್ಮಲ್ಲಿ ಬಹಳ ಮಂದಿ ತಿಳಿದಂತೆ ಕಾಣುತ್ತದೆ. ಕನ್ನಡ ಒಂದು ಭಾಷೆಯಾಗಿ ಮಾತ್ರ ಕಡ್ಡಾಯಗೊಂಡರೆ ಆಗ ಅದು ಹೇಗೋ ಮೂವತ್ತೈದು ಅಂಕಗಳನ್ನು ಗಳಿಸಿ ಪಾಸು ಮಾಡಿ ಮರೆತುಬಿಡಬಹುದಾದ ವಿಷಯವಾಗಿಬಿಡುತ್ತದೆ. ಆದ್ದರಿಂದ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಖಾಸಗಿ ಶಾಲೆಯಲ್ಲಿ ಕಲಿಯಲೇಬೇಕಾದ ಕೆಲವು ವಿಷಯಗಳನ್ನು – ಉದಾ : ಚರಿತ್ರೆ, ಭೂಗೋಳ, ಪರ್ಯಾವರಣ ಇತ್ಯಾದಿ ವಿಷಯಗಳನ್ನು – ಕನ್ನಡದಲ್ಲಿ ಕಲಿಸಬೇಕೆಂಬ ನಿಯಮವಿರಬೇಕು. ಈ ನಿಯಮವನ್ನು ಕಡ್ಡಾಯವಾಗಿ ಜಾರಿ ಮಾಡಿ ಈ ವಿಷಯಗಳ ಬಗ್ಗೆ ಉತ್ತಮವಾದ ಪುಸ್ತಕಗಳನ್ನು ತಯಾರಿಸಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹೋಗುವ ಮಕ್ಕಳು ಕೊನೆಯಪಕ್ಷ ಮಾನವಿಕ ಶಾಸ್ತ್ರಗಳನ್ನಾದರೂ ಕನ್ನಡದಲ್ಲಿ ಓದಿದರೆ ಅವರಲ್ಲಿ ಕನ್ನಡ ಖಂಡಿತ ಬೇರೂರುತ್ತದೆ. ಈ ವಿಷಯಗಳನ್ನು ದೇಶದ ಭಾಷೆಯಲ್ಲೇ ಕಲಿಯುವುದು ಸೂಕ್ತವೆನ್ನುವುದು ವೈಜ್ಞಾನಿಕವಾಗಿಯೂ ಸಮರ್ಥನೀಯವಾದುದು. ತನ್ನ ಸುತ್ತಲಿನ ಜೀವಂತ ಪ್ರಪಂಚಕ್ಕೆ ಸ್ಪಂದಿಸುವುದರಿಂದ ಮಾತ್ರ ಭೂಗೋಳ, ಆರೋಗ್ಯಶಾಸ್ತ್ರ ಇತ್ಯಾದಿಗಳು ಮಕ್ಕಳಿಗೆ ನಿಜವೆನ್ನಿಸುವುದು.

೧. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸುವ ಮೂಲಕವಾದರೂ ಬಲಪಡಿಸುವುದು ಮತ್ತು

೨. ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಮಾನವಿಕ ವಿಷಯಗಳನ್ನು ಕನ್ನಡದಲ್ಲಿ ಕಲಿಸುವುದು – ಈ ಎರಡೂ ಕಾರ್ಯಕ್ರಮಗಳ ಮುಖಾಂತರ ನಾವು ನಮ್ಮ ಜ್ಞಾನವರ್ಧನೆಗೆ ಕನ್ನಡವನ್ನು ಬಳಸುವುದು ಸಾಧ್ಯವಾದಂತಾಗುತ್ತದೆ.

ಆಗ ಕನ್ನಡ ಬೆಳೆಯುತ್ತದೆ; ನಾವೂ ಸೃಜನಶೀಲರಆಗಿ ಬೆಳೆಯುತ್ತೇವೆ. ಕನ್ನಡ ಕಳೆಯದಂತೆ ಇಂಗ್ಲಿಷ್ ಬರುತ್ತದೆ; ಇಂಗ್ಲಿಷನ್ನು ಕಡೆಗಣಿಸದಂತೆ, ಸರ್ವರೂ ಅದರಲ್ಲಿ ಪಾಲಾಗುವಂತೆ, ಕನ್ನಡ ಬೆಳೆಯುತ್ತದೆ.
ದಿನಾಂಕ ೧೪-೫-೦೫ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ